
ಬಹುಅಂಗಾಂಗ ವೈಫಲ್ಯದಿಂದ ಕಾಡಾನೆ ಸಾವು: ತಾಯಿಯ ಬಳಿ ನಿಂತು ಮರಿ ಆನೆ ಮೂಕರೋಧನೆ
ರಾಮನಗರ ಜಿಲ್ಲೆಯ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಮನಕಲಕುವ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣಾನೆಯೊಂದು ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದು, ಅದರ ಮೃತದೇಹದ ಬಳಿ ನಿಂತು ಮರಿ ಆನೆ ಮೂಕರೋಧನೆ ವ್ಯಕ್ತಪಡಿಸಿರುವ ದೃಶ್ಯ ಎಲ್ಲರ ಮನಸ್ಸನ್ನು ಮಿಡಿಯಿಸಿದೆ.
ಕನಕಪುರ ತಾಲೂಕಿನ ಮಡಿವಾಳ ಸಮೀಪದ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಸುಮಾರು 35 ವರ್ಷದ ಹೆಣ್ಣಾನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ ಸಾವನ್ನಪ್ಪಿರುವುದನ್ನು ಅರಿಯದ ಮರಿ ಆನೆ ಮೃತದೇಹದ ಬಳಿ ನಿಂತೇ ರೋಧನೆ ಮಾಡುತ್ತಿರುವ ದೃಶ್ಯ ಸ್ಥಳೀಯರ ಕಣ್ಣೀರನ್ನು ತರಿಸಿದೆ.
ಈ ಘಟನೆಗೆ ಸಂಬಂಧಿಸಿದ ಮರಿ ಆನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಾಹಿತಿ ತಿಳಿದ ಕೂಡಲೇ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಳಿಕ ಅರಣ್ಯ ಸಿಬ್ಬಂದಿ ಮರಿ ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

