
ಕೊಪ್ಪಳ: ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ SSLC ಫಲಿತಾಂಶದಲ್ಲಿ ಭಾರಿ ಎಡವಟ್ಟು ಬೆಳಕಿಗೆ ಬಂದಿದೆ. ಜಿಲ್ಲೆಯ ಕಾತರಕಿ ಗುಡ್ಲಾನೂರ ಗ್ರಾಮದ ಸಂಜನಾ ಮಡಿವಾಳ ಎಂಬ ವಿದ್ಯಾರ್ಥಿನಿ ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಕನ್ನಡ ವಿಷಯದಲ್ಲಿ ಕೇವಲ 12 ಅಂಕ ಮಾತ್ರ ನಮೂದಾಗಿರುವುದು ಆಘಾತಕ್ಕೆ ಕಾರಣವಾಗಿದೆ.
ಪರೀಕ್ಷೆಯ ಉತ್ತರ ಪತ್ರಿಕೆಯ ನಕಲು ಪರಿಶೀಲನೆ ಮಾಡಿದಾಗ ಸಂಜನಾ ವಾಸ್ತವವಾಗಿ 71 ಅಂಕಗಳನ್ನು ಪಡೆದಿರುವುದು ಬಹಿರಂಗವಾಗಿದೆ. ಆದರೆ ತಪ್ಪು ಅಂಕ ನಮೂದು ವಿದ್ಯಾರ್ಥಿನಿಗೆ ಭಾರೀ ಮಾನಸಿಕ ಆಘಾತ ಉಂಟುಮಾಡಿದ್ದು, ಆತ್ಮಹತ್ಯೆಗೆ ಯತ್ನಿಸುವಂತ ಸ್ಥಿತಿ ಉಂಟಾಗಿದೆ.
ಸಂಜನಾ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಪೋಷಕರು ಸಮಯಕ್ಕೆ ಸರಿಯಾಗಿ ಗಮನಿಸಿ ಆಕೆಯನ್ನು ರಕ್ಷಿಸಿದ್ದು, ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಬಯಲಿಗೆಳೆದಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಜನಾ ತಂದೆ ಮಂಜುನಾಥ್ ಮಡಿವಾಳ, “ನನ್ನ ಮಗಳಿಗೆ ನಡೆದ ಘಟನೆ ಮತ್ತೊಬ್ಬರಿಗೂ ಆಗಬಾರದು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

