
ಬೆಂಗಳೂರು, ಏ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಯುವತಿ ಪೂಜಾ ದತ್ತ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಆಘಾತ ಮೂಡಿಸಿದೆ.
ಆಡುಗೋಡಿ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ಪೂಜಾ ದತ್ತ ಅವರ ಮೃತದೇಹ ಬೆತ್ತಲೆ ಹಾಗೂ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ಒಡೆದು ಒಳನುಗ್ಗಿದಾಗ, ಪೂಜಾ ಅವರ ಮೃತದೇಹ ಭೀಕರ ಸ್ಥಿತಿಯಲ್ಲಿ ಕಂಡುಬಂದಿದೆ. ಮೃತದೇಹ ಸಂಪೂರ್ಣ ಕೊಳೆತಿರುವುದರಿಂದ ಸಾವು ಸಂಭವಿಸಿ 2-3 ದಿನಗಳಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಸಂಶಯ ಹುಟ್ಟಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
🧨 ಮನೆ ಮಾಲಕಿ ಹೇಳಿದ ಮಾಹಿತಿ
ಮನೆ ಮಾಲಕಿ ಜಾನಕಮ್ಮ ನೀಡಿದ ಮಾಹಿತಿ ಪ್ರಕಾರ, ಪೂಜಾ ಕಳೆದ ಮೂರು ವರ್ಷಗಳಿಂದ ಬಾಡಿಗೆಗೆ ವಾಸವಾಗಿದ್ದಳು. ಆಕೆಯನ್ನು ನೋಡಲು ಆಗಾಗ ಒಬ್ಬ ಯುವಕ ಬರುತ್ತಿದ್ದನು. ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
“ಕೊನೆಯದಾಗಿ ಗುರುವಾರ ಪೂಜಾಳನ್ನು ನೋಡಿದ್ದೆ. ಆ ನಂತರ ಆಕೆ ಕಾಣಿಸಿಕೊಂಡಿರಲಿಲ್ಲ. ಇಂದು ದುರ್ವಾಸನೆ ಬಂದ ಕಾರಣ ಬಾಗಿಲು ಒಡೆದು ನೋಡಿದಾಗ ಈ ದಾರುಣ ಘಟನೆ ಬೆಳಕಿಗೆ ಬಂತು,” ಎಂದು ಜಾನಕಮ್ಮ ತಿಳಿಸಿದ್ದಾರೆ.
🔍 ತನಿಖೆ ತೀವ್ರ
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಜೊತೆಗೆ ಪೂಜಾ ಅವರ ಮೊಬೈಲ್ ಕರೆ ವಿವರಗಳು, ಸ್ನೇಹಿತರ ಮಾಹಿತಿ ಸೇರಿದಂತೆ ಹಲವು ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ

