

ಚೆನ್ನೈ:ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಈ ನಡುವೆ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ Thalapathy Vijay ವಿರುದ್ಧ ಪ್ರಕರಣ ದಾಖಲಾಗಿರುವುದು ಗಮನ ಸೆಳೆದಿದೆ.
ಗುರುವಾರ (ಏಪ್ರಿಲ್ 16) ಚೆನ್ನೈನ ಮೆಂಬ್ಲಮ್ ಪೊಲೀಸ್ ಠಾಣೆಯಲ್ಲಿ ವಿಜಯ್ ಸೇರಿದಂತೆ ಬುಸ್ಸಿ ಆನಂದ್ ಮತ್ತು ಅಪ್ಪನ್ನು ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನುಮತಿ ಪಡೆಯದೆ ರೋಡ್ ಶೋ ನಡೆಸಿದ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಈ ಬಾರಿ ಆಡಳಿತರೂಢ ಡಿಎಂಕೆ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಮತ್ತು ಎಐಎಡಿಎಂಕೆ ಒಟ್ಟಿಗೆ ಚುನಾವಣೆಗೆ ಸಜ್ಜಾಗಿವೆ. ಇದೇ ವೇಳೆ, ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಮೊದಲ ಬಾರಿಗೆ ಏಕಾಂಗಿಯಾಗಿ ಚುನಾವಣೆಗೆ ಇಳಿದಿದೆ.
ಪಕ್ಷದ ಮುಖ್ಯಸ್ಥ ವಿಜಯ್ ಪೆರಂಬೂರು ಹಾಗೂ ತಿರುಚ್ಚಿ (ಪೂರ್ವ) ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದು, ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅನುಮತಿ ಇಲ್ಲದೆ ನಡೆಸಿದ ರೋಡ್ ಶೋ ಇದೀಗ ವಿವಾದಕ್ಕೆ ಕಾರಣವಾಗಿ, ಕಾನೂನು ಸವಾಲು ಎದುರಿಸುವ ಪರಿಸ್ಥಿತಿ ಉಂಟಾಗಿದೆ.

